ಅರ್ಕಾವತಿ ಜಲಾಶಯ
ಅರ್ಕಾವತಿ ಜಲಾಶಯವು ಅಥವಾ ಹಾರೋಬೆಲೆ ಅಣೆಕಟ್ಟು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅನೇಕಲ್ಲು ತಾಲೂಕಿನಲ್ಲಿ ಇರುವ ಹಾರೋಬೆಲೆ ಎಂಬ ಗ್ರಾಮದಲ್ಲಿ ಅರ್ಕಾವತಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ. ಅರ್ಕಾವತಿ ನದಿಯು ನಂದಿ ಬೆಟ್ಟದಲ್ಲಿ ಹುಟ್ಟಿ ಸಂಗಮದಲ್ಲಿ ಕಾವೇರಿ ನದಿಯ ಜೊತೆಗೆ ಸಂಗಮವಾಗುವ ಮೊದಲು ಇಲ್ಲಿ ಜಲಾಶಯದಲ್ಲಿ ಸಂಗ್ರಹವಾಗಿ ನೀರಾವರಿ ಉದ್ದೇಶಗಳಿಗಾಗಿ ಬಳಸಲ್ಪಡುತ್ತಿದೆ. ಇದು ಚುಂಚಿ ಗ್ರಾಮದ ಬಳಿ ಜಲಪಾತವಾಗಿ ಧುಮುಕಿ ನಂತರ ಸಂಗಮದಲ್ಲಿ ಕಾವೇರಿ ನದಿಯ ಜೊತೆ ಸೇರುತ್ತದೆ. ೧೯೭೦ರ ದಶಕದಲ್ಲಿ ಕೇಂದ್ರದಲ್ಲಿ ಅಧಿಕಾರ ಹೊಂದಿದ್ದ ಜಗಜೀವನರಾಮರಿಗೆ ಸಾತನೂರಿನ ಪುಟ್ಟದಾಸ ಎಂಬುವರು ನಿಕಟವರ್ತಿಯಾಗಿದ್ದರು. ಅವರ ಪ್ರಭಾವದಿಂದ ಪ್ರವಾಹ ನಿಯಂತ್ರಣ ಯೋಜನೆಯನ್ವಯ ಹಾರೋಬೆಲೆಗೆ ಒಂದು ಜಲಾಶಯ ಮಂಜೂರಾಯಿತು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ದೇವರಾಜ ಅರಸರು ೧೯೭೫ರಲ್ಲಿ ಅಣೆಕಟ್ಟಿಗೆ ಮೂಲೆಗಲ್ಲು ನೆಟ್ಟರು. ಅಂದಿನಿಂದ ಸುಮಾರು ಮೂವತ್ತು ವರ್ಷಗಳ ಕಾಲ ಕುಂಟುತ್ತಾ ಸಾಗಿದ ಈ ಯೋಜನೆ ಇಂದು ಕಾರ್ಯರೂಪಕ್ಕೆ ಬಂದಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ ೨೦ ಮೀಟರುಗಳಾದರೂ ಸನಿಹದ ಮೂರು ಹಳ್ಳಿಗಳ ಮುಳುಗಡೆಯ ಭೀತಿಯಿಂದ ೧೫ ಮೀಟರುಗಳಿಗೆ ಸೀಮಿತಗೊಳಿಸಲಾಗಿದೆ. ಎರಡೂ ದಂಡೆಗಳ ನಾಲೆಗಳಿಂದಲ್ಲದೆ ಏತದ ಮೂಲಕವೂ ಈ ನೀರನ್ನು ಗ್ರಾಮಗಳಿಗೆ ಉಣಿಸಲಾಗುತ್ತಿದೆ.
![](http://upload.wikimedia.org/wikipedia/kn/thumb/9/93/%E0%B2%85%E0%B2%B0%E0%B3%8D%E0%B2%95%E0%B2%BE%E0%B2%B5%E0%B2%A4%E0%B2%BF_%E0%B2%9C%E0%B2%B2%E0%B2%BE%E0%B2%B6%E0%B2%AF%E0%B2%A6_%E0%B2%B9%E0%B2%BF%E0%B2%A8%E0%B3%8D%E0%B2%A8%E0%B3%80%E0%B2%B0%E0%B2%BF%E0%B2%A8_%E0%B2%A8%E0%B3%8B%E0%B2%9F.jpg/220px-%E0%B2%85%E0%B2%B0%E0%B3%8D%E0%B2%95%E0%B2%BE%E0%B2%B5%E0%B2%A4%E0%B2%BF_%E0%B2%9C%E0%B2%B2%E0%B2%BE%E0%B2%B6%E0%B2%AF%E0%B2%A6_%E0%B2%B9%E0%B2%BF%E0%B2%A8%E0%B3%8D%E0%B2%A8%E0%B3%80%E0%B2%B0%E0%B2%BF%E0%B2%A8_%E0%B2%A8%E0%B3%8B%E0%B2%9F.jpg)