ಆನಂದ ಮಠ (ಪುಸ್ತಕ)
![]() ಆನಂದ ಮಠ (ಬಂಗಾಳಿ ಕಾದಂಬರಿ) | |
ಲೇಖಕರು | ಬಂಕಿಮ ಚಂದ್ರ ಚಟ್ಟೋಪಾಧ್ಯಾಯ |
---|---|
ಮೂಲ ಹೆಸರು | আনন্দ মঠ |
ದೇಶ | ಭಾರತ |
ಭಾಷೆ | ಬೆಂಗಾಲಿ |
ಪ್ರಕಾಶಕರು | ರಾಮಾನುಜನ್ ಯುನಿವರ್ಸಿಟಿ ಪ್ರೆಸ್ |
ಪ್ರಕಟವಾದ ದಿನಾಂಕ | 1882 |
ಇಂಗ್ಲೀಷ್ನಲ್ಲಿ ಪ್ರಕಟಗೊಂಡಿದ್ದು | 2005, 1941, 1906 |
ಮಾಧ್ಯಮ ಪ್ರಕಾರ | Print (Paperback) |
ಪುಟಗಳು | 336 pp |
ಆನಂದ ಮಠ (ಬಂಗಾಳಿ : আনন্দমঠ), ಬಂಕಿಮ ಚಂದ್ರ ಚಟ್ಟೋಪಾಧ್ಯಾಯರು ರಚಿಸಿದ ಬಂಗಾಳಿ ಭಾಷೆಯ ಕಾದಂಬರಿ. ಬಂಗದರ್ಶನ್ ಎಂಬ ನಿಯತಕಾಲಿಕದಲ್ಲಿ ಧಾರಾವಾಹಿ ಸ್ವರೂಪದಲ್ಲಿ ಮೊದಲು ಕಾಣಿಸಿಕೊಂಡ ಈ ಕಾದಂಬರಿಯು ಕ್ರಿಸ್ತಶಕ ೧೮೮೨ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು.[೧]
ವಿಶಿಷ್ಟತೆ[ಬದಲಾಯಿಸಿ]
೧೮ನೇ ಶತಮಾನದ ಅಂತ್ಯದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ದ ನಡೆದ ಸನ್ಯಾಸಿ ಕ್ರಾಂತಿಯನ್ನು ಆಧಾರವಾಗಿಟ್ಟುಕೊಂಡು ಈ ಕಾದಂಬರಿಯನ್ನು ಹೆಣೆಯಲಾಗಿದೆ. ಬ್ರಿಟೀಶ್ ಸಾಮ್ರಾಜ್ಯದ ವಿರುದ್ದ ನಡೆದ ಸ್ವಾತಂತ್ರ್ಯ ಹೋರಾಟದದಲ್ಲಿ ಈ ಕೃತಿಯು ಮಹತ್ವದ ಪಾತ್ರವನ್ನು ವಹಿಸಿದೆ. ಬಾರತದ ರಾಷ್ಟ್ರೀಯತೆಯ ಪ್ರತೀಕವೆಂದು ಭಾವನಾತ್ಮಕವಾಗಿ ಪರಿಗಣಿಸಲಾಗುವ "ವಂದೇಮಾತರಂ" ಗೀತೆಯು ಇದೇ ಕಾದಂಬರಿಯ ಭಾಗವಾಗಿದೆ.[೨] ಈ ಗೀತೆಗೆ ಮೊದಲ ಬಾರಿಗೆ ರವೀಂದ್ರನಾಥ ಟ್ಯಾಗೋರ್ರವರು ಸಂಗೀತ ಸಂಯೋಜಿಸಿದ್ದರು. ಬ್ರಿಟೀಶ್ ಸರ್ಕಾರವು ಈ ಪುಸ್ತಕದ ಮೇಲೆ ಹೇರಿದ್ದ ನೀಷೇಧವನ್ನು, ಭಾರತವು ಸ್ವಾತಂತ್ರ್ಯ ಗಳಿಸಿದ ಮೇಲೆ ಹಿಂತೆಗೆಯಲಾಯಿತು.
![](http://upload.wikimedia.org/wikipedia/kn/thumb/3/3b/Ananda-Matha.png/220px-Ananda-Matha.png)
ಕಥಾವಸ್ತು[ಬದಲಾಯಿಸಿ]
ಆನಂದಮಠ ಎಂಬುದು ಒಂದು ರಾಜಕೀಯ ಕಾದಂಬರಿಯಾಗಿದೆ. ೧೭೭೦ರಲ್ಲಿ ಬಂಗಾಳ ರಾಜ್ಯವು ಎದುರಿಸಿದ ಭೀಕರ ಬರಗಾಲದ ಹಿನ್ನಲೆಯಿಟ್ಟುಕೊಂಡು ಮಹೇಂದ್ರ , ಕಲ್ಯಾಣಿ, ಸತ್ಯಾನಂದ, ಜೀವಾನಂದ, ಭವಾನಂದ ಮತ್ತು ಶಾಂತಿ ಎಂಬ ಮುಖ್ಯ ಪಾತ್ರಗಳ ಸುತ್ತ ನಡೆಯುವ ಕತೆಯಾಗಿದೆ. ಮಹೇಂದ್ರ ಮತ್ತು ಕಲ್ಯಾಣಿ ಜಮೀನ್ದಾರರ ಕುಟುಂಬಕ್ಕ ಸೇರಿದ ದಂಪತಿ, ಬರಗಾಲದ ಪರಿಣಾಮ, ತಮ್ಮ ಊರಾದ ಪದಚಿನ್ಹವನ್ನು ಬಿಡಬೇಕಾದ ಸನ್ನೀವೇಶ ಉಂಟಾಗುತ್ತದೆ. ಹೀಗೆ ಊರು ತೊರೆದವರು ಪುಟ್ಟ ಮಗು ಸುಕುಮಾರಿಯ ಜೊತೆ ಕಾಡು ಪಾಲಾಗುತ್ತಾರೆ. ಅಲ್ಲಿ ಆಂಗ್ಲರ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ದ ಬಂಡಾಯವೆದ್ದಿರುವ ಕ್ರಾಂತಿಕಾರಿ ಸನ್ಯಾಸಿಗಳ ತಂಡವು ಸಿಗುವುದು. ಮಹೇಂದ್ರನೂ ಕೂಡ ಆ ತಂಡದೊಡನೆ ಸೇರಿಕೊಂಡು, ಆನಂದ ಮಠ ಸಂಸ್ಥೆಯ ಮುಖ್ಯಸ್ಥ ಸತ್ಯಾನಂದರ ಶ್ರೀರಕ್ಷೆಯಲ್ಲಿ, ಸನ್ಯಾಸಿ ಕ್ರಾಂತಿಯಲ್ಲಿ ಪಾಲ್ಗೊಳ್ಳುತ್ತಾನೆ. ಈ ಕಾದಂಬರಿಯಲ್ಲಿ ಭಾರತವನ್ನು ದುರ್ಗೆ,ಕಾಳಿ ಹಾಗೂ ಜಗದ್ದಾತ್ರಿಯ ಎಂಬ ಮೂರು ರೂಪಗಳ ಭಾರತ ಮಾತೆಯಾಗಿ ವಿವರಿಸುವ ಭಾಗವು ವಿಶೇಷವಾಗಿದೆ.
ಅನುವಾದ ಮತ್ತು ರೂಪಾಂತರ[ಬದಲಾಯಿಸಿ]
ಈ ಕಾದಂಬರಿಯನ್ನು ಕನ್ನಡಕ್ಕೆ ಮೊದಲ ಬಾರಿ ಅನುವಾದಿಸಿದವರು ವೆಂಕಟಾಚಾರ್ಯ ಬಿ.[೩] ಇತರ ಲೇಖಕರು ಮಾಡಿದ ಆನುವಾದಿತ ಆವೃತ್ತಿಗಳು ಕೂಡ ಲಭ್ಯವಿರುವವು. ೨೦೦೭ ರಲ್ಲಿ ಎಸ್. ಆರ್. ರಾಮಸ್ವಾಮಿಯವರು ಕನ್ನಡಕ್ಕೆ ಅನುವಾದ ಮಾಡಿದುದನ್ನು ರಾಷ್ಟ್ರೋತ್ಥಾನ ಸಾಹಿತ್ಯದವರು ಪ್ರಕಟಿಸಿದ್ದಾರೆ. ಆನಂದ ಮಠ ಕಾದಂಬರಿ ಆಧಾರಿತ ಚಲನಚಿತ್ರವು ೧೯೫೨ರಲ್ಲಿ ಹಿಂದಿ ಭಾಷೆಯಲ್ಲಿ ಆನಂದ ಮಠ ಎಂಬ ಹೆಸರಿನಲ್ಲಿ ಬಿಡುಗಡೆಗೊಂಡಿತು. ಪೃಥ್ವಿರಾಜ್ ಕಪೂರ್, ಪ್ರದೀಪ್ ಕುಮಾರ್, ಗೀತಾ ಬಾಲಿ ನಟಿಸಿದ ಈ ಚಿತ್ರಕ್ಕ್ಕೆ ಹೇಮಂತ್ ಕುಮಾರ್ ಸಂಗೀತ ನಿರ್ದೇಶನ ಮಾಡಿದ್ದರು. ಲತಾ ಮಂಗೇಶ್ಕರ್ ದನಿಯಲ್ಲಿ ಮೂಡಿದ ವಂದೇ ಮಾತರಂ ಹಾಡು ಬಲು ಜನಪ್ರಿಯವಾಗಿತ್ತು.