ಭಾಷೆ,ಪ್ರಸಂಗ ಮತ್ತು ವೇಷಭೂಷಣಗಳಲ್ಲಿ ವೈಶಿಷ್ಟ್ಯತೆಗಳನ್ನು ಮೈಗೂಡಿಸಿಕೊಂಡಿರುವ ತುಳು ಯಕ್ಷಗಾನ ಪರಂಪರೆಯನ್ನು ವಿದ್ವಾಂಸರು "ತುಳುತಿಟ್ಟು" ಎಂದು ಗುರುತಿಸಿಕೊಂಡಿದ್ದಾರೆ. ಇದು ತೆಂಕುತಿಟ್ಟು ಯಕ್ಷಗಾನದ ಪ್ರಭೇದವಾಗಿ ವ್ಯವಸಾಯಿ ಮೇಳವಾಗಿ ಬೆಳೆದು ಬಂತು.ತುಳು ಯಕ್ಷಗಾನವು ತುಳುನಾಡಿನಲ್ಲಿ ಉಗಮವಾದರೂ,ಅದರ ಮಾಧ್ಯಮ ಕನ್ನಡವೇ ಆಗಿದ್ದಿತು. ಹಿಂದಿನ ದಿನಗಳಲ್ಲಿ ಕನ್ನಡ ಭಾಷೆಯೇ ಪ್ರಧಾನವಾಗಿದ್ದರಿಂದ ತುಳು ಭಾಷೆಯ ಪ್ರಸಂಗಗಳು-ಪ್ರದಶFನಗಳು ವಿಫುಲವಾಗಿ ಕಂಡು ಬರುತ್ತದೆ.
೧೮೮೭ರಲ್ಲಿ ಬಾಯಾರು ಪೆರುವಡಿ ಸಂಕಯ್ಯ ಭಾಗವತರು ರಚಿಸಿದ "ಪಂಚವಟಿ-ವಾಲಿಸುಗ್ರೀವೆರೆ ಕಾಳಗೊ" ಎಂಬುದು ತುಳು ಭಾಷೆಯಲ್ಲಿ ದೊರಕಿದ ಮೊದಲ ಉಪಲಬ್ದ ಪ್ರಸಂಗ ಕೃತಿ. ಅನಂತರ ಮೂವತ್ತರ ದಶಕದಲ್ಲಿ "ಕೃಷ್ಣ ಸಂಧಾನ","ಅಂಗದ ಸಂಧಾನ"ಮೊದಲಾದ ಪ್ರಸಂಗ ಕೃತಿಗಳು ರಚನೆಯಾದವು. ೧೯೨೯ರಲ್ಲಿ ಪಂದಬೆಟ್ಟು ವೆಂಕಟರಾಯರು ಕೋಟಿ-ಚೆನ್ನಯ ಎಂಬ ಅವಳಿ ಪುಣ್ಯಪುರುಷರ ಸಾಹಸಗಾಧೆಯನ್ನು ತುಳು ಯಕ್ಷಗಾನ ಪ್ರಸಂಗಕ್ಕೆ ಅಳವಡಿಸಿದ ಮೊದಲ ಪ್ರಯತ್ನವಾಗಿದೆ. ಪ್ರಾರಂಭದ ದಿನಗಳಲ್ಲಿ ಕನ್ನಡ ಯಕ್ಷಗಾನಗಳು ಜನಪ್ರೀಯಗೊಂಡರೂ ತುಳುನಾಡಿನ ಜನತೆ ತುಳು ಭಾಷೆಯ ಯಕ್ಷಗಾನಕ್ಕೆ ಒಲವು ತೋರಿಸಿದ್ದರ ಪರಿಣಾಮವಾಗಿ ಜಾನಪದ,ಐತಿಹಾಸಿಕ,ಕಾಲ್ಪನಿಕ ಪ್ರಸಂಗಗಳ ಟೆಂಟ್ ಮೇಳಗಳು ಹುಟ್ಟಿಕೊಂಡವು.